ಕನ್ನಡದಲ್ಲಿ ಬರೆದು ಹುಡುಕಿ

ಕಥಾಕಾಲಕ್ಷೇಪ

ಅಂತವರಿಂತವರು
ನಿಂತವರೆಂತವರು
ಅಂತೆ ಕಂತೆ ಶುರು
ಮಂಥನ ಬಲು ಜೋರು

ಪಂಥಕೆ ಇಳಿವವರ್ಯಾರು
ಚಿಂತೆಯೊಳಿಳಿದಿಹರಿವರು
ಕುಂತರೂ ನಿಂತರೂ ಶುರು
ಚಿಂತಕರಾಗಿಹರೀ ಜನರು

ಹಣವನು ಚೆಲ್ಲುವನಾರು
ಬಣಗಳ ಒಡೆಯುವನಾರು
ಜಾಣತೆ ಅದೆ ಎನ್ನುವರು
ಗಣಿತವ ಮಾಡುತಲಿಹರು

ಸ್ವಜಾತಿಜನ ಪ್ರಿಯನಾರು
ವಿಜಾತಿಯವನು ಯಾರು
ರಾಜಕೀಯದ ಬೇರು
ಈ ಜನಗಣಿತದ ಉಸಿರು.

ವಿದ್ಯೆ ಬುದ್ಧಿಗಳಿರಲಿ
ಆದ್ಯತೆ ಸಾಧನೆಯಿರಲಿ
ಸಾಧ್ಯವೇ ಇಲ್ಲ ಗೆಲಲಿಲ್ಲಿ
ವೇದ್ಯವೆನುತಿಹರಿವರು.

ಭ್ರಷ್ಟರಾದರೂ ಕೂಡ
ಇಷ್ಟ ಪಡುವರ ನೋಡ
ಕಷ್ಟಜೀವಿಯು ಕುರುಡ
ನಿಷ್ಠತೆ ಹಿಡಿಸಿತು ಮೋಡ

ಯಾರಿಗೆ ಮಠಗಳ ಒಲವು
ಯಾರದು ಮಾತಿನ ಚೆಲುವು
ಯಾರಿಗೆ ಇಲ್ಲಿ ಗೆಲುವು
ಅರಿತಿಹರೆಲ್ಲಾ ಸುಳಿವು.

ಕಳೆದಿಹ ನಿನ್ನೆಯ ಕುರಿತು
ದಳ್ಳುರಿಯೆಲ್ಲಾ ಮರೆತು
ಕಳೆಯಲು ಕಾಲವ ಕುಳಿತು
ಒಳ್ಳೆ ಕುರುಕಲು ಮೆಲುಕು.

ಪ್ರಳಯ_ಹಂತಕ....

ನಾವಿರುವ ಅವನಿಯೊಳು
ಭವಸಾಗರದಲಿ ಧಾವಿಸುತಿರುವ
ನಾವೆಯನು ನಾವೇರಲು
ಅವನೂ ಇರುವ ಇವನೂ ಇರುವ
ದೇವನೆ ನಾವಿಕನಾಗಿರುವ.
ಅವನಿಚ್ಛೆಯೊಳೆಲ್ಲಾ ಜೀವ ಶಿವ.

ನಾವೆಲಿ ಕಾಲವ ಸವೆಯಿಸಲು
ಕಾವೇರಿರುವ ಮಾತುಗಳು
ಅವರಿವರೊಳಗೆ ಅವಿತಿರುವ
ನೋವುಂಡಿರುವ ಭಾವಗಳು
ಸಾವಿರ ಸಾವಿರ ಪಂಥಗಳು
ಆವಿರ್ಭವಿಸಿತು ನಾವೆಯೊಳು

ಅವರಿವರೊಳಗೂ ಅವಿತಿರುವ
ಅವನೇ ನಾವಿಕನಾಗಿರುವ
ಕಾವನು ಅವನೆ ಜವನೂ ಅವನೆ
ಇವರೊಳಗುದಿಸಿದ ಭಾವವೂ ಅವನೆ
ಜೀವ ಜೀವಗಳ ಸಮತೋಲನ ತಪ್ಪಿಸಿ
ನಾವೆಯ ಮುಳುಗಿಸೆ ಅವತರಿಸಿದನೆ

ಅವನಿಯನುಳಿಸುವ ಭಾವವೆ ಪ್ರೀತಿ
ಸವಿಯುತಲಿರಲದೆ ಜೀವಿಸೊ ರೀತಿ
ನಾವಿಕಗಿಲ್ಲ ತೊಯ್ದಾಟದ ಭೀತಿ
ನಾವೆಯ ಚಲನೆಯ ಗತಿಗದೆ ಸ್ಫೂರ್ತಿ
ಭುವಿಯೊಳಗುಳಿಸುತ ಜೀವಿ ಸಂತತಿ
ಭವಸಾಗರ ದಾಟಿಪ ನಾವೆಯ ಅಧಿಪತಿ.

ಭಾರತ ನಾರಿ

ನೀಲನಭದಲಿ ಹೊಳೆವ ಕಾಯವು
ಇಳಿದು ಬಂದರೂ ಬಳಿಗೆ ನಿಂದರೂ
ಖಾಲಿ ಹಣೆಯಲಿ ನಿಲುವೆನೆಂದರೂ
ಒಲ್ಲೆನೆನ್ನುವೆ ತೊಲಗು ಎನ್ನುವೆ

ತಾರೆ ಸಂಕುಲ ಸೇರಿ ಮಾಲೆಯ
ಹಾರವಾಗುತ ತುರುಬ ಗಂಟನು
ಸೇರಬಂದರೂ ದೂರ ಓಡುತ
ಜಾರಿಕೊಳ್ಳುವೆ ದೂರ ನಿಲ್ಲುವೆ

ಮುಂದೆ ಕತ್ತಲು ಹಿಂತಿರುಗಿ ನೋಡಲು
ಸಂದ ದಿನಗಳ ಬೆಳಕು ಹೊಳೆಯಲು
ಕೆಂಡದಂತೆಯೆ ಸುಡುತಲಿದ್ದರೂ
ಹೊಂದಿಕೊಳ್ಳುವೆ ಚಂದವೆನ್ನುವೆ

ಸ್ವರ್ಗಸುಖಗಳ ತೋರಿದಿನಿಯನು
ಸ್ವರ್ಗಸ್ಥನಾದನು ತೊರೆದನೆನ್ನನು
ದುರ್ಗಕಟ್ಟಿಹ ವರ್ಗದ ಜೊತೆ ಸು
ದೀರ್ಘ ಪಯಣದ ಮಾರ್ಗ ಸವೆಸುವೆ

ನೆನಪಿನಲೆಯಲಿ ಒನಪು ತೇಲುತ
ನೆನಪಲುಳಿಯದೇ ದೂರ ಸಾಗುತ
ಮನಸಿನಂಗಣ ನೆನಪಿನಂಗಣ
ಕನಸಿಗೆಲ್ಲಿದೆ ಜಾಗ ಈ ಕ್ಷಣ

ರಾಜಕಳೆ

ಕಲಾವಿದರಿಗಿದೆ ಬೆಲೆ
ಎಲ್ಲೆಡೆಗೂ ಸಲ್ಲುವರು
ಕಲೆಗೆ ಎಲ್ಲೆಗಳೆಲ್ಲಿ ದೇಶಭಾಷೆಗಳೆಲ್ಲಿ
ಗೆಲುವಿನಾಸೆಗೆ ಇವನೂ
ಕಲೆಯೊಂದ ಕಲಿತಿಹನು
ಮೂಲೆ ಮೂಲೆಯ ಜನರ ಓಲೈಸಲೆಂದು.

ಆಳಿ ಅಳಿಯದೇ ಉಳಿದ
ಬಾಳಬೆಳಕಂತಿರುವ
ಹಳೆಯ ತಿಳಿಮನಗಳುಲಿ ಕಲಿತವನೇನಲ್ಲ
ಬಳಗವಿದೆ, ಹಾಳೆಯೊಳು
ಇಳಿಸಿ ಕಳುಹುವರದನು
ಹೇಳಿದರಾಯಿತು ಓದಿ ತಿಳಿಯಬೇಕಿಲ್ಲ

ಜಾತಿ ಮತ ಪಂಥಗಳ
ಮತಿಗಳೊಳಗಿಳಿಯೆ
ಪ್ರೀತಿಯಾಗುವ ರೀತಿ ಮಾತನಾಡುವನು
ಹಿತವೆನಿಸೊ ರೀತಿಯಲಿ
ಪ್ರತಿಕ್ರಿಯೆಯ ಕಾತರಕೆ
ಪ್ರತಿಕ್ಷಣಕೂ ಬದಲಾಗೊ ವೇಷಭೂಷಣವು.

ಗುಲ್ಲು ಗದ್ದಲ ಮಾಡಿ
ಚೆಲ್ಲಿದ ನೆತ್ತರಲಿ ನಿಂದು
ಎಲ್ಲರನು ಬೇಡುವನು ಗೆಲಿಸಿಕೊಡಿರೆಂದು
ಬಲ್ಲ ಕಲೆಗಾರರಿಗೆ
ಒಲ್ಲದಿಹ ಕಲೆಗಳಿವು
ಎಲ್ಲ ರಾಜಕಲೆಗಳಿವು ದಿಲ್ಲಿಗದ್ದುಗೆಗೆ.

ಸೋಲಿಲ್ಲದ ಸರದಾರ

ದೂರದೂರಿನಲಿ ಕೆಲಸ ಕಾರ್ಯದಲಿ
ಇರುವನವಳ ಗಂಡ
ಊರ ಸರದಾರ ರಾಜಗಂಭೀರ
ನಾರಿಯಂದದಲಿ ಬೆಂದ
ಕರುಣೆ ತೋರಿಸುತ ನೆರವ ನೀಡೊ ನೆಪ
ಆರೇಳು ಬಾರಿ ನಡಿಗೆ
ದಾರಿ ಸವೆಯುತಿದೆ ಸಾರಿ ಸಾರಿ ಸುಂ-
-ದರಿಯ ಮನೆಯ ಕಡೆಗೆ
ಜಾರಿ ಬಿದ್ದವಳು ಸೇರಿ ತೋಳುಗಳ
ಸೀರೆ ಕಳೆವಳೆಂಬ
ಅರಸನಾಸೆಗಳು ದೂರವಾಗುತ್ತಿತ್ತು
ಗರತಿಗೇಕೋ ಜಂಭ.
ಮಾರನಾಣತಿಯು ಜೋರು ಜೋರಾಗಿ
ಕೋರಿಕೊಂಡನವಳ
ನಾರಿ ಕರದಿಂದ ಮೋರೆಗಪ್ಪಳಿಸೆ
ಉರುಳಿಸಿದ ಬೇರೆ ದಾಳ.
ನಾರಿ ಕರೆವಳೆಂದು ಊರ ಜನರೊಳಗೆ
ಹರಡುತಿದ್ದ ಸುಳ್ಳು
ಭೂರಿ ಭೋಜನವು ದೊರೆತ ಜಿಹ್ವೆಗಳು
ಸುರಿಸುತಿತ್ತು ಜೊಲ್ಲು
ಊರು ಕೇರಿಯಲೂ ದಾರಿ ನಡುವಿನಲು
ಹರಡುತಿತ್ತು ಸುದ್ದಿ
ಜಾರ ಅರಸನಿಗೆ ಕರವ ಮುಗಿಯುತಲಿ
ಮರೆತರವರ ಬುದ್ಧಿ
ಬೆರೆಯಲಿನ್ನೆಂತು ದೂರದಿನಿಯನಿಗೆ
ಅರುಹಳವಳು ದಿಟವ
ಕರೆಸಿಕೊಂಡವನು ಒರೆಸಿ ಕಣ್ಣೀರ
ಮರೆಸುತಿಹನವಳ ದುಃಖವ
ಊರ ನಡುವಿನಲಿ ನೂರು ಕಥೆಗಳಿವೆ
ಅರಿಯರವಳ ಗೋಳ
ಊರ ಅರಸನಿಗೆ ಸೆರಗು ಹಾಸಿದ
ಜಾರೆಯೆಂಬರವಳ.
ಕೋತಿಯೂಟವನು ಒರೆಸೊ ಬಾಲಕ್ಕೆ
ಮತಿಗಳೆಲ್ಲಿ ಇಹುದು.
ರೀತಿ ನೀತಿಗಳ ತಿಂದು ಹೊಲಸಾದ
ಮೂತಿಯೊರೆಸುತಿಹುದು.

ಕಥಾಕಾಲಕ್ಷೇಪ

ಅಂತವರಿಂತವರು ನಿಂತವರೆಂತವರು ಅಂತೆ ಕಂತೆ ಶುರು ಮಂಥನ ಬಲು ಜೋರು ಪಂಥಕೆ ಇಳಿವವರ್ಯಾರು ಚಿಂತೆಯೊಳಿಳಿದಿಹರಿವರು ಕುಂತರೂ ನಿಂತರೂ ಶುರು ಚಿಂತಕರಾಗಿಹರೀ ಜನರು ಹಣವನು ಚೆಲ್...